ಭ್ರಷ್ಟರಾದರು ಮನುಜರು

ಭ್ರಷ್ಟರಾದರು ಮನುಜರು

ಅಷ್ಟ ಮದ ಗರ್ವದಲಿ ಹರಿಸ್ಮರಣೆಯನು ಮರೆತು

ಮಡದಿ ಮಾತನು ಕೇಳಿ ನಡೆದುಕೊಂಬನು ಭ್ರಷ್ಟ
ಪಡೆದ ಜನನಿಯನು ಬೈಯುವನು ಭ್ರಷ್ಟ
ಕಡವ ಕೊಟ್ಟವರೊಡನೆ ಧಡಿತನ ಮಾಡುವ ಭ್ರಷ್ಟ
ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ

ಬಾರದೊಡವೆಗಳನ್ನು ಬಯಸುವನು ತಾ ಭ್ರಷ್ಟ
ಸೇರದವರೊಡನೆ ಸ್ನೇಹಿಸುವ ಭ್ರಷ್ಟ
ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ
ನಾರಿಯರ ನೆಚ್ಚಿದಾ ನರನು ಕಡು ಭ್ರಷ್ಟ

ತಂತ್ರವನು ಅರಿಯದೆ ಮಂತ್ರ ಮಾಡುವ ಭ್ರಷ್ಟ
ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು
ಅಂತರವನರಿಯದೆ ನುಡಿದವನು ಭ್ರಷ್ಟ ಸ್ವ-
ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ

ಹರಿಚರಿತ್ರೆಗಳನ್ನು ಜರಿದಾಡುವವ ಭ್ರಷ್ಟ
ಹರಿಯ ಶರಣರ ನೋಡಿ ನಿಂದಿಸುವ ಭ್ರಷ್ಟ
ಗುರುಹಿರಿಯರ ಪಾದಕ್ಕೆರಗದವ ಭ್ರಷ್ಟ
ನೆರೆಹೊರೆಯರನು ನೋಡಿ ಕುರುಬುವನು ಭ್ರಷ್ಟ

ಹರಿನಾಮವನು ದಿನದಿ ಸ್ಮರಿಸದಾತನು ಭ್ರಷ್ಟ
ಕರುಣವಿಲ್ಲದ ವಿಪ್ರನವ ಭ್ರಷ್ಟನು
ಕರುಣಾಳು ನಮ್ಮ ಸಿರಿ ಪುರಂದರವಿಠಲನ
ಚರಣಕಮಲವ ಸ್ಮರಿಸದವ ಭ್ರಷ್ಟನಯ್ಯ

No comments: