ಮಂಗಳ ಶ್ರೀತುಳಸಿದೇವಿಗೆ

ಮಂಗಳ ಶ್ರೀತುಳಸಿದೇವಿಗೆ
ಜಯ ಮಂಗಳ ವೃಂದಾವನದೇವಿಗೆ

ನೋಡಿದ ಮಾತ್ರಕೆ ದೋಷ ಸಂಹಾರಿಗೆ
ಬೇಡಿದ ವರಗಳ ಕೊಡುವವಳಿಗೆ
ಮಾಡೆ ವಂದನೆಯನು ಮನುಜರ ಪಾಪದ
ಗೂಡ ನೀಡಾಡುವ ಗುಣವಂತೆಗೆ

ಮುಟ್ಟಿದ ಮಾತ್ರಕೆ ಮುಕ್ತರ ಮಾಡುವ
ಮುದದಿಂದುದ್ಧರಿಸುವ ಮುನಿವಂದೈಗೆ
ಕೊಟ್ಟರೆ ನೀರನು ಬೇರಿಗೆ ಕಾಲನ
ಮುಟ್ಟಿಲೀಸದ ಹಾಗೆ ಮಾಳ್ಪಳಿಗೆ

ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ
ಚಿತ್ತವಲ್ಲಭ ಕೃಷ್ಣನ್ಹರುಷದಲಿ
ಅತ್ಯಂತವಾಗಿ ತಾ ತೋರಿ ಭವದ ಬೇರ
ಕಿತ್ತು ಬಿಸಾಡುವ ಕೋಮಲೆಗೆ

ಕೋಮಲವಾಗಿದ್ದ ದಳಮಂಜರಿಗಳ
ಪ್ರೇಮದಿಂದಲಿ ತಂದು ಶ್ರೀಹರಿಗೆ
ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ
ಕಾಮಿತಾರ್ಥವನೀವ ಸದ್ಗುಣಿಗೆ

ಕಾಷ್ಠವ ತಂದು ಗಂಧವ ಮಾಡಿ ಕೃಷ್ಣಗೆ
ನಿಷ್ಠಯಿಂದಲಿ ಲೇಪನ ಮಾಳ್ಪರ
ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂ
ತುಷ್ಟರ ಮಾಡುವ ಸೌಭಾಗ್ಯಗೆ

ಅನ್ನವನುಂಡರು ನೀಚರ ಮನೆಯಲ್ಲಿ
ಉನ್ನತ ಪಾಪವ ಮಾಡಿದ್ದರೂ
ತನ್ನ ದಳವನೊಂದ ಕರ್ಣದಲ್ಲಿಟ್ಟರೆ
ಧನ್ಯರ ಮಾಡುವ ದಯವಂತೆಗೆ

ಸರಸಿಜನಾಭನ ಸಲಿಗೆಯ ರಾಣಿಗೆ
ಶರಣಜನರ ಪೊರೆವ ಸದ್ಗುಣಿಗೆ
ತಿರುಪತಿ ನಿಲಯ ಶ್ರೀಪುರಂದರವಿಠಲನ
ಚರಣಸೇವಕಳಾದ ಚಿನ್ಮಯೆಗೆ

No comments: