ಇಂದು ನಾನೇನು ಸುಕೃತವ ಮಾಡಿದೆನೋ

ಇಂದು ನಾನೇನು ಸುಕೃತವ ಮಾಡಿದೆನೋ
ಮಂಗಳ ಮಹಿಮ ವೇಂಕಟ ಬಂದ ಮನೆಗೆ


ಹಾರಕೇಯೂರ ಹೊನ್ನುಂಗುರ ಬೆರಳು
ಹಾರದ ನಡುವೆ ಹಾಕಿದವೇಳು ಪದಕ
ತೋರಮುತ್ತಿನ ಕಂಠಮಾಲೆ ಸರಿಗೆಯು ಕೋ-
ನೇರಿವಾಸ ವೇಂಕಟ ಬಂದ ಮನೆಗೆ


ಕಾಲಪೆಂಡಿಗೆಯು ರಕ್ಕಸರ ಹಾವಿಗೆಯು
ಮೇಲಾದ ವಜ್ರನವರತ್ನದ ಮಕುಟ
ವೀಳ್ಯದ ಬಾಯಿ ಕರ್ಪೂರದ ಕರಡಿಗೆಯು
ಮೇಲುಗಿರಿವಾಸ ವೇಂಕಟ ಬಂದ ಮನೆಗೆ


ಬಿಗಿದು ಸುತ್ತಿದ ವಲ್ಲಿ ಬಿಡಿಮುತ್ತಿನ ಕಂಠಿ
ಬಿಗಿ ಮುಗುಳುನಗೆ ದಂತ ಎಸೆವಂಥ ಪಙ್ತೆ
ತೆಗೆದುಟ್ಟ ಪೀತಾಂಬರ ಉಡುಗೆ ಕಠಾರಿ
ಯದುಗಿರಿವಾಸ ವೇಂಕಟ ಬಂದ ಮನೆಗೆ


ನೊಸಲ ಸುತ್ತಿದ ಪಟ್ಟೆ ಎಸೆವೊ ಕಸ್ತುರಿಯು
ವಶವಾದ ಅಮೃತದ ರಸ ಸವಿಮಾತು
ಎಸಳುಕಂಗಳ ನೋಟ ಹೊಸ ಪಂಚಬಾಣ
ಸುಕುಮಾರ ಸೊಬಗು ವೇಂಕಟ ಬಂದ ಮನೆಗೆ


ಕಲಿಯುಗದಲಿ ಶಂಖಚಕ್ರವ ಧರಿಸಿ
ಹದಿನಾಲ್ಕುಲೋಕ ತನ್ನುದರದಲ್ಲಿಟ್ಟು
ಗರುಡನ ಏರಿ ಮೂರ್ಜಗವ ಮೋಹಿಸುವ
ಪುರಂದರವಿಠಲ ವೇಂಕಟ ಬಂದ ಮನೆಗೆ

ನಾನೇಕೆ ಬಡವನೊ ನಾನೇಕೆ ಪರದೇಶಿ


ನಾನೇಕೆ ಬಡವನೊ ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ

ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ
ಇಷ್ಟ ಬಂಧು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ

ಒಡಹುಟ್ಟಿದವ ನೀನೆ ಒಡಲಹೊರೆವವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವವ ನೀನೆ
ಮಡದಿ ಮಕ್ಕಳನೆಲ್ಲ ಕಡೆಹಾಯಿಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವತನಕ

ವಿದ್ಯೆ ಹೇಳುವವ ನೀನೆ ಬುದ್ಧಿ ಕಲಿಸುವವ ನೀನೆ
ಉದ್ಧಾರಕರ್ತ ಮಮಸ್ವಾಮಿ ನೀನೆ
ಮುದ್ದು ಶ್ರೀ ಪುರಂದರವಿಠಲ ನಿನ್ನಡಿಮೇಲೆ
ಬಿದ್ದು ಕೊಂಡಿರುವತನಕ ಏತರ ಭಯವೊ

ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ


ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ
ಶ್ರೀರಾಮನಾಮ ಧ್ವನಿಗೆ

ಕಣಕಾಲಂದುಗೆ ಗೆಜ್ಜೆ ಝಣ ಝಣರೆನುತ
ಝಣಕು ಝಣಕುರೆಂದು ಕುಣಿ ಕುಣಿದಾಡುತ

ತುಂಬುರು ನಾರದ ವೀಣೆಯ ಬಾರಿಸುತ
ವೀಣೆ ಬಾರಿಸುತ ಶೀರಾಮನಾಮ ಪಾಡುತ ಕುಣಿದಾಡುತ

ಪುರಂದರವಿಠಲನ ನೆನೆದು ಪಾಡುತಲಿ ನೆನೆದು ಪಾಡುತಲಿ
ಆಲಿಂಗನ ಮಾಡುತಲಿ

ಲಾಲಿಸಿದಳು ಮಗನ ಯಶೋದೆ


ಲಾಲಿಸಿದಳು ಮಗನ ಯಶೋದೆ ಲಾಲಿಸಿದಳು ಮಗನ

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ

ಬಾಲಕನೆ ಕೆನೆ ಹಾಲು ಮೊಸರನೀವೆ
ಲೀಲೆಯಿಂದಲಿ ಎನ್ನ ತೋಳ ಮೇಲ್ಮಲಗೆಂದು

ಮುಗುಳು ನಗೆಯಿಂದ ಮುದ್ದು ತಾ ತಾರೆಂದು
ಜಗದೊಡೆಯನ ಶ್ರೀ ಪುರಂದರವಿಠಲನ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ


ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ

ವಾಗಭಿಮಾನಿ ವರ ಬ್ರಹ್ಮಾಣಿ
ಸುಂದರವೇಣಿ ಸುಚರಿತ್ರಾಣಿ

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರಸೊಸೆಯ

ವೃಂದಾವನದೊಳಗಾಡುವನ್ಯಾರೆ

ವೃಂದಾವನದೊಳಗಾಡುವನ್ಯಾರೆ ಗೋಪಿ
ಚಂದಿರವದನೆ ನೋಡುವ ಬಾರೆ

ಅರುಣಪಲ್ಲವ ಪಾದಯುಗಳನೆ ದಿವ್ಯ
ಮರಕತ ಮಂಜುಳಾಭರಣನೆ
ಸಿರಿವರ ಯದುಕುಲ ಸೋಮನೆ ಇಂಥ
ಪರಿಪೂರ್ಣ ಕಾಮ ನಿಸ್ಸೀಮನೆ

ಹಾರಹೀರ ಗುಣಧಾರನೆ ದಿವ್ಯ
ಸಾರ ಶರೀರ ಶೃಂಗಾರನೆ
ಆರಿಗಾದರು ಮನದೂರನೆ ತನ್ನ
ಸೇರಿದವರ ಮಾತ ಮೀರನೆ

ಮಕರಕುಂಡಲ ಕಾಂತಿಭರಿತನೆ ದಿವ್ಯ
ಅಕಳಂಕ ರೂಪ ಲಾವಣ್ಯನೆ
ಸಕಲರೊಳಗೆ ದೇವನೀತನೆ ನಮ್ಮ
ಮುಕುತೀಶ ಪುರಂದರವಿಠಲನೆ

ರಾಮ ಎಂಬೊ ಎರಡಕ್ಷರದ ಮಹಿಮೆಯನು

ರಾಮ ಎಂಬೊ ಎರಡಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ



ರಾ ಎಂದ ಮಾತ್ರದೊಳು ರಕ್ತಮಾಂಸದೊಳಿದ್ದ
ಆಯಸ್ತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ



ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೋಗದಂತೆ ಕವಾಟವಾಗಿ
ಚಿತ್ತಕಾಯಗಳ ಪವಿತ್ರಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ



ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಪುರಂದರವಿಟ್ಠಲನ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ

ಯಾರಿಗೆ ಯಾರುಂಟು ಎರವಿನ ಸಂಸಾರ

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ

ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ

ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ

ಅಡವಿಯೊಳ್ಮನೆಮಾಡಿ ಗಿಡಕೆ ತೊಟ್ಟಿಲು ಕಟ್ಟಿ
ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ

ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೊ ಹೊತ್ತಿಗೆ ನೀ ಕಾಯೊ ಹರಿಯೆ

ನಾ ಮಾಡಿದ ಕರ್ಮ ಬಲವಂತವಾದರೆ

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವದೇನೊ ದೇವ


ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣಿಯಲಲ್ಲಿ ಬರೆದುದಕೆ


ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾನ ಜಪತಪ ನೀಗಿ
ದಾನವಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆಮನೆಯ ತಿರುಗುತಲಿದ್ದೆ


ಅತಿಥಿಗಲಿಗೆ ಅನ್ನ ಕೊಟ್ಟವನಲ್ಲ ಪರ-
ಸತಿಯರ ಸಂಗ ಅರಘಳಿಗೆ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿ ಯಾವುದೆನಗಿನ್ನು ಗರುಡುಗಮನ ಕೃಷ್ಣ


ಇನ್ನಾದರು ನಿನ್ನ ದಾಸರ ಸಂಗವಿತ್ತು
ಮನ್ನಿಸಿ ಸಲಹಯ್ಯ ಮನ್ಮಥಜನಕ
ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ
ಪನ್ನಂಗಶಯನ ಶ್ರೀ ಪ್ರುರಂದರವಿಠಲ

ನಾ ನಿನಗೇನ ಬೇಡುವದಿಲ್ಲ

ನಾ ನಿನಗೇನ ಬೇಡುವದಿಲ್ಲ
ಎನ್ನ ಹೃದಯಕಮಲದೊಳು ನೆಲಸಿರು ಹರಿಯೆ


ಶಿರ ನಿನ್ನ ಚರಣಕೆರಗಲಿ ಚಕ್ಷು
ಎರಕದಿಂದಲಿ ನಿನ್ನ ನೋಡಲಿ ಹರಿಯೆ
ನಿರುಮಾಲ್ಯ ನಾಸ ಘ್ರಾಣಿಸಲಿ ಎನ್ನ
ಕರಣ ಗೀತಂಗಳ ಕೇಳಲಿ ಹರಿಯೆ


ನಾಲಗೆ ನಿನ್ನ ಕೊಂಡಾದಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ ಮನ
ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ


ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ
ಭಕ್ತಜನರ ಸಂಗ ದೊರಕಲಿ ಹರಿಯೆ
ತತ್ತ್ವಯೋಗಭ್ಯಾಸಕ್ಕಾಗಲಿ ಉಕ್ತಿ
ಸತ್ಯಮೂರುತಿ ನಮ್ಮ ಪುರಂದರವಿಠಲ

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ


ಅಂಬುಜನಾಭನ ಅಖಿಳ ಲೋಕೇಶನ
ಅಪ್ರಮೇಯನಾದ ಆದಿಪುರುಷನ


ಪಿತನ ತೊಡೆಯ ಮೇಲೆ ಧ್ರುವರಾಯ
ಹಿತದಿಂದ ಕುಳಿತಿರಲು
ಮತಿಹೀನಳಾದ ಸುರುಚಿದೇವಿ ನೂಕಲು
ಹಿತದಿ ಧ್ರುವಗೆ ಪಟ್ಟ ಕೊಟ್ಟ ಮುರಾರಿಯ


ವರ ಪ್ರಹ್ಲಾದನ ಪಿತನು ಬಾಧಿಸುತಿರೆ
ಹರಿ ನೀನೆ ಗತಿಯೆನಲು
ಪರಮ ಪ್ರೀತಿಯಿಂದ ತರಳನ ಪಾಲಿಸಿ
ದುರುಳ ಹಿರಣ್ಯಕಶ್ಯಪನ ಸೀಳಿದ ಧೊರೆಯ


ಕರಿರಾಜನ ಸಲಹಿ ಅಂಜದಿರೆಂದು ಅ-
ದರಿಸಿದವರು ಯಾರೋ
ಗರುಡಗಮನ ಶ್ರೀ ಪುರಂದರವಿಠಲನ
ಚರಣಕಮಲವನ್ನು ದೃಢದಿಂದ ನಂಬಿರೊ

ನಗೆಯು ಬರುತಿದೆ ಎನಗೆ

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ

ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದನೆ ಕಂಡು

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರೊಳಗೆ ಮುಳುಗಿ
ಬೆರಳನೆಣಿಸುತಿಹರ ಕಂಡು


ಪತಿಯ ಸೇವೆ ಬಿಟ್ಟಿ ಪರ
ಪತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು


ಹೀನ ಗುಣದ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮೌನಿ ಪುರಂದರವಿಠಲನ್ನ
ಧ್ಯಾನ ಮಾಡುವವನ ಕಂಡು

ಧನವ ಗಳಿಸಬೇಕಿಂತಹುದು

ಧನವ ಗಳಿಸಬೇಕಿಂತಹುದು ಈ
ಜನರಿಗೆ ಕಾಣಿಸದಂತಹುದು


ಕೊಟ್ಟರೆ ತೀರದಂತಹುದು ತನ್ನ
ಬಿಟ್ಟು ಅಗಲಿ ಇರದಂತಹುದು
ಕಟ್ಟಿದ ಗಂಟನು ಬಯಲೊಳಗಿಟ್ಟರೆ
ಮುಟ್ಟರು ಆರೂ ಅಂತಹುದು


ಕರ್ಮವನೋಡಿಸುವಂತಹುದು
ಧರ್ಮವ ಮಾಡಿಸುವಂತಹುದು
ನಿರ್ಮಲವಾಗಿಸಿ ಮನಸಿನೊಳಗೆ ನಿಜ
ಧರ್ಮವ ತೋರಿಸುವಂತಹದು


ಅಜ್ಞಾನವು ಬಾರದಂತಹದು ನಿಜ
ಸುಜ್ಞಾನವ ತೋರುವಂತಹದು
ವಿಜ್ಞಾನಮೂರುತಿ ಪುರಂದರವಿಠಲನ
ಪ್ರಜ್ಞೆಯನ್ನು ಕೊಡುವಂತಹುದು